
ವಕೀಲ ಸದಾಶಿವ ರೆಡ್ಡಿ ಮೇಲಿನ ಹಲ್ಲೆ ಖಂಡನೆ: ನ್ಯಾಯವಾದಿಗಳ ಕಲಾಪ ಬಹಿಷ್ಕಾರ
News Details
ರಾಜ್ಯ ವಕೀಲರ ಪರಿಷತ್ ಸದಸ್ಯ ಸದಾಶಿವ ರೆಡ್ಡಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ರಾಜ್ಯದ ನ್ಯಾಯವಾದಿಗಳು ತೀವೃವಾಗಿ ಖಂಡಿಸಿದ್ದಾರೆ. ಸೋಮವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ರವಾನಿಸಿದರು.
2025ರ ಏಪ್ರಿಲ್ 16ರಂದು ಸದಾಶಿವ ರೆಡ್ಡಿ ಅವರು ತಮ್ಮ ಬೆಂಗಳೂರಿನ ಕಚೇರಿಯಲ್ಲಿದ್ದರು. ತಮ್ಮ ಕಿರಿಯ ಸಹೋದ್ಯೋಗಿಗಳ ಜೊತೆ ಅವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗ, ಇಬ್ಬರು ಅಪರಿಚಿತರು ಕಚೇರಿಗೆ ಬಂದಿದ್ದು, ಏಕಾಏಕಿ ಸದಾಶಿವ ರೆಡ್ಡಿ ಅವರ ಮೇಲೆ ದಾಳಿ ಮಾಡಿದರು. ಫೈಬರ್ ಪೈಪುಗಳಿಂದ ಹೊಡೆದ ಪರಿಣಾಮ ಸದಾಶಿವ ರೆಡ್ಡಿ ಹಾಗೂ ಅವರ ತಾಯಿ ಸಹ ಗಾಯಗೊಂಡರು. ಮೂಳೆ ಮುರಿತಕ್ಕೆ ಒಳಗಾದ ವಕೀಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಏಪ್ರಿಲ್ 19ರಂದು ವಕೀಲರ ಸಂಘದವರು ಸಭೆ ನಡೆಸಿ ದುಷ್ಕರ್ಮಿಗಳ ದಾಳಿಯನ್ನು ಖಂಡಿಸಿದರು. ನ್ಯಾಯವಾದಿಗಳ ಮೇಲೆ ಹಲ್ಲೆ ಮಾಡಿದವರನ್ನು ಶಿಕ್ಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಅದರ ಮುಂದುವರೆದ ಭಾಗವಾಗಿ ಏಪ್ರಿಲ್ 21ರಂದು ರಾಜ್ಯದ ಎಲ್ಲಡೆ ಮೌನ ಪ್ರತಿಭಟನೆ ನಡೆಸಲು ನ್ಯಾಯವಾದಿಗಳು ನಿರ್ಧರಿಸಿದ್ದರು. ಒಟ್ಟು 199 ವಕೀಲ ಸಂಘಟನೆಗಳು ಈ ದಾಳಿಯನ್ನು ಖಂಡಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಈ ದಿನ ಶಾಂತಿಯುತ ಪ್ರತಿಭಟನೆ ನಡೆದಿದ್ದು, ನ್ಯಾಯವಾದಿಗಳಿಗೆ ರಕ್ಷಣೆ ಇಲ್ಲದಿರುವ ಬಗ್ಗೆ ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಇಲ್ಲಿನ ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ ಕಳವಳವ್ಯಕ್ತಪಡಿಸಿದರು.
ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳು ಕೆಂಪು ಪಟ್ಟಿ ಧರಿಸಿ ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು. `ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು' ಎಂದು ನ್ಯಾಯವಾದಿಗಳಾದ ಜಿ ಜಿ ಪಾಠಣಕರ್, ಎಂ ಕೆ ಹೆಗಡೆ, ಬೀಬಿ ಅಮೀನಾ ಶೇಖ, ಎಂ ಬಿ ನಾಗರಾಜ್ ಅವರು ಸರ್ಕಾರಕ್ಕೆ ಪತ್ರ ರವಾನಿಸಿದರು. ವಕೀಲರಾದ ಎನ್ ಕೆ ಭಾಗ್ವತ್, ಆರ್ ಕೆ ಭಟ್, ವಿ ಟಿ ಭಟ್, ಪಿ ಜಿ ಭಟ್, ಶುಭಾಶ ಭಟ್, ಮಹೇಶ್ ನಾಯ್ಕ ಇನ್ನಿತರರು ಹಾಜರಿದ್ದರು.