
ಶಿರಸಿಯಲ್ಲಿ ಬಸ್ಸಿನಲ್ಲಿ ಅನಾಚಾರವೆಸಗಿದ ವ್ಯಕ್ತಿಗೆ ಮಹಿಳೆಯರಿಂದ ಥಳನೆ, ಗಂಭೀರ ಎಚ್ಚರಿಕೆ
News Details
ಬಸ್ಸಿನಲ್ಲಿದ್ದ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಶಿರಸಿಯಲ್ಲಿ ಮಹಿಳೆಯರು ಹಿಡಿದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸಿನ ಒಳಗೆ ಒಂದಿಬ್ಬರು ಆತನಿಗೆ ಥಳಿಸಿದ್ದಾರೆ. ಕೊನೆಗೆ `ನಿನ್ನ ನರ ಕಟ್ ಮಾಡ್ತೇವೆ' ಎಂದು ಎಚ್ಚರಿಸಿದ್ದಾರೆ.
ಭಾನುವಾರ ರಾತ್ರಿ ಇಳಿಕಲ್-ಮಂಗಳೂರು ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ಸು ಸಂಚರಿಸುತ್ತಿತ್ತು. ಮೂವರು ಪುರುಷ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಆ ಬಸ್ಸು ಏರಿದ್ದರು. ಸೀಟು ಹಿಡಿಯುವ ವಿಚಾರವಾಗಿ ಶುರುವಾದ ಅವರ ಜಗಳ ತಾರಕಕ್ಕೇರಿತ್ತು. ಅಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಸಹ ಆ ಮೂವರು ತೊಂದರೆ ನೀಡಲು ಶುರು ಮಾಡಿದ್ದರು. ಇದರಿಂದ ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರು ತಮ್ಮ ಶಕ್ತಿ ಪ್ರದರ್ಶಿಸಿದರು.
ಆ ಬಸ್ಸು ಶಿರಸಿ ಹೊಸ ಬಸ್ ನಿಲ್ದಾಣ ತಲುಪಿದಾಗ ಮಹಿಳೆಯರೆಲ್ಲರೂ ಸೇರಿ ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕನನ್ನು ಕೆಳಗಿಳಿಸಿದರು. ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಆತನ ವಿರುದ್ಧ ದೂರು ನೀಡಿದರು. ಜೊತೆಗಿದ್ದ ಇನ್ನಿಬ್ಬರು ಪುರುಷ ಪ್ರಯಾಣಿಕರು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಅವರ ಬಗ್ಗೆಯೂ ಮಹಿಳೆಯರು ದೂರಿದರು. ಪೊಲೀಸರು ಆ ಪ್ರಯಾಣಿಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸುವವರಿದ್ದರು.
ಆದರೆ, ಈ ವೇಳೆಗೆ ಮದ್ಯದ ನಶೆಯಲ್ಲಿದ್ದವರು ಬಸ್ ನಿರ್ವಾಹಕರ ಮೇಲೆ ಕೈ ಮಾಡಿದ ವಿಷಯ ಬೆಳಕಿಗೆ ಬಂದಿತು. `ತಮ್ಮ ಮೇಲೆ ಹಲ್ಲೆ ನಡೆದಿದೆ' ಎಂದು ಬಸ್ ನಿರ್ವಾಹಕ ಸಂಗಪ್ಪ ಅಂಗಡಿ ಪೊಲೀಸರ ಬಳಿ ಹೇಳಿದರು. ಹಲ್ಲೆಯಿಂದ ಪೆಟ್ಟು ಮಾಡಿಕೊಂಡಿದ್ದ ಆ ಬಸ್ಸಿನ ನಿರ್ವಾಹಕ ಸಂಗಪ್ಪ ಅಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದರು. ಸರಾಯಿ ಕುಡಿದು ಬಸ್ ಏರಿದ್ದ ಪ್ರಯಾಣಿಕನಿಗೆ ಪೊಲೀಸರು ಬೆಂಡೆತ್ತಿದರು.