
ನಿತೀಶ ತಾಂಡೇಲ್ ಬಿಯರ್ ಬಾಟಲಿ ಎಸೆದು ಹೊಡೆತ: ಪೊಲೀಸರಿಂದ ಗುಂಡು ಹಾರಣೆ
News Details
ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಪ್ರಕರಣದ ಮುಖ್ಯ ಆರೋಪಿ ನಿತೀಶ ತಾಂಡೇಲ್ ಪೊಲೀಸರ ಮೇಲೆ ಬಿಯರ್ ಬಾಟಲಿ ಎಸೆದಿದ್ದಾರೆ. ಇದಕ್ಕೆ ಪ್ರತಿಯಾಗಿ ನಿತೀಶ್ ತಾಂಡೇಲ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಭಾನುವಾರ ಸಂತೆ ದಿನ ಸತೀಶ್ ಕೋಳಂಬಕರ್ ಕೊಲೆ ನಡೆದಿತ್ತು. ಹಣಕಾಸಿನ ವಿಷಯದ ವೈಷಮ್ಯದ ಕಾರಣ ಚಾಕು ಇರಿದು ಸತೀಶರನ್ನು ಕೊಂದಿದ್ದ ನಿತೀಶ್ ಕೊಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಕೊಲೆ ನಂತರ ನಿತೀಶ್ ಬಸ್ ನಿಲ್ದಾಣ ಬಳಿಯ ಅಜ್ಜಿ ಮನೆಗೆ ತೆರಳಿ ಸ್ನಾನ ಮಾಡಿ, ಗೋವಾಗೆ ಪರಾರಿಯಾಗಿದ್ದರು. ತಮ್ಮ ಇನ್ನಿತರ ಸ್ನೇಹಿತರ ಜೊತೆ ಅಲ್ಲಿ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.
ಮAಗಳವಾರ ಬಂಧಿತ ಆರೋಪಿ ನಿತೀಶರನ್ನು ಪಂಚನಾಮೆಗಾಗಿ ಗೋವಾ ಕಡೆ ಕರೆದೊಯ್ಯಲಾಗುತ್ತಿತ್ತು. ಮಾಜಾಳಿ ಬಳಿ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ ನಿತೀಶ್ ತಾಂಡೇಲ್ ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ಶರಣಾಗುವಂತೆ ಸೂಚಿಸಿದರೂ ಕೇಳದ ಕಾರಣ ಪಿಎಸ್ಐ ಕುಮಾರ ಕಾಂಬ್ಳೆ ತಮ್ಮ ಬಳಿಯಿದ್ದ ಪಿಸ್ತೂಲು ತೆಗೆದರು. ನಿತೀಶ್ ತಾಂಡೇಲ್ ಅವರ ಕಾಲಿಗೆ ಗುರಿಯಾಗಿರಿಸಿ ಗುಂಡು ಹಾರಿಸಿದರು.
ಈ ಘರ್ಷಣೆಯಲ್ಲಿ ಪಿಎಸ್ಐ ಕುಮಾರ ಕಾಂಬ್ಳೆ ಸಹ ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಸನ ಕುಟ್ಟಿ ಹಾಗೂ ಗಿರೀಶಯ್ಯ ಅವರಿಗೂ ಪೆಟ್ಟಾಗಿದೆ. ಗಾಯಗೊಂಡ ಎಲ್ಲರೂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತೀಶ ತಾಂಡೇಲ್ ಜೊತೆ ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಎಂಬಾತರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಪೊಲೀಸರು ಅವರ ವಿಚಾರಣೆ ಮುಂದುವರೆಸಿದ್ದಾರೆ. ದರ್ಶನ್ ಮಾಜಾಳಿಕರ್ ಎಂಬಾತರ ಪಾತ್ರ ಇಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಸತೀಶ್ ಕೋಳಂಬರ್ ಅವರ ತಾಬಾದಲ್ಲಿದ್ದ ಮಳಿಗೆಯನ್ನು ನಿತೀಶ್ ತಾಂಡೇಲ್ ಬಾಡಿಗೆಗೆ ಪಡೆದಿದ್ದು, ಅಲ್ಲಿನ ಹಣಕಾಸಿನ ವಿಷಯದ ಗೊಂದಲ ಕೊಲೆಗೆ ಕಾರಣ. ಇದೇ ವಿಷಯವಾಗಿ ಹೊಟೇಲ್ವೊಂದರಲ್ಲಿ ಗಲಾಟೆ ನಡೆದಿದ್ದು, ಆ ವೇಳೆಯೇ ಜೀವ ತೆಗೆಯುವ ಬೆದರಿಕೆಯ ಮಾತುಗಳು ಕೇಳಿ ಬಂದಿದ್ದವು.