
ಯಲ್ಲಾಪುರ ಜಾತ್ರಾ ಅವ್ಯವಹಾರ: 11 ಲಕ್ಷ ರೂ ಪ್ರಕರಣದ ಕಡತ ನಾಪತ್ತೆ, ಲೋಕಾಯುಕ್ತಕ್ಕೆ ದೂರು ನೀಡಲು ಸತೀಶ ನಾಯ್ಕ ಎಚ್ಚರಿಕೆ
News Details
ಯಲ್ಲಾಪುರ ಜಾತ್ರಾ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಕಳೆದ ಸಭೆಯಲ್ಲಿ ಗಮನಕ್ಕೆ ಬಂದಿದ್ದು, ಬುಧವಾರ ನಡೆದ ಸಭೆಯಲ್ಲಿ ಈ ಪ್ರಕರಣದ ಕಡತವೇ ಕಾಣೆಯಾದ ವಿಷಯ ಹೊರ ಬಿದ್ದಿದೆ. ಹೀಗಾಗಿ ಈ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಲೋಕಾಯುಕ್ತ ದೂರು ನೀಡುವುದಾಗಿ ಮಂಜುನಾಥ ನಗರ ವಾರ್ಡಿನ ಸದಸ್ಯ ಸತೀಶ ನಾಯ್ಕ ಹೇಳಿದ್ದಾರೆ.
ಜಾತ್ರೆಯಲ್ಲಿ ಹರಾಜು ಮಾಡಲಾದ ಪ್ಲಾಟುಗಳ ಲೆಕ್ಕಾಚಾರ ಒದಗಿಸುವಂತೆ ಪ ಪಂ ಸದಸ್ಯರು ಪ್ರತಿ ಸಭೆಯಲ್ಲಿಯೂ ಒತ್ತಾಯಿಸುತ್ತಿದ್ದರು. ಆದರೆ, ಐದು ಸಭೆ ನಡೆದರೂ ಅಧಿಕಾರಿಗಳು ಲೆಕ್ಕ ಒಪ್ಪಿಸಿರಲಿಲ್ಲ. ಮಾರ್ಚ 19ರಂದು ನಡೆದ ಸಭೆಯಲ್ಲಿ ಅಧಿಕಾರಿಗಳು ಲೆಕ್ಕ ನೀಡಿದ್ದು, ಈ ವೇಳೆ ಸರಿಸುಮಾರು 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಸದಸ್ಯರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ತನಿಖೆ ನಡೆಯಬೇಕು ಎಂದು ಆ ಸಭೆಯಲ್ಲಿ ಠರಾವು ಮಾಡಲು ನಿರ್ಧರಿಸಲಾಗಿತ್ತು. ಠರಾವು ಪ್ರತಿಯನ್ನು ಸದಸ್ಯರಿಗೆ ತೋರಿಸುವ ಮೊದಲೇ ಮುಖ್ಯಾಧಿಕಾರಿಯಾಗಿದ್ದ ಸುನೀಲ ಗಾವಡೆ ವರ್ಗವಾಗಿದ್ದರು.
ಅದಾದ ನಂತರ ಬುಧವಾರ ಇನ್ನೊಂದು ಸಭೆ ನಡೆದಿದ್ದು, ಈ ಸಭೆಯಲ್ಲಿಯೂ ಜಾತ್ರೆ ಲೆಕ್ಕಾಚಾರದ ವಿಷಯ ಪ್ರತಿಧ್ವನಿಸಿತು. ಹಳೆಯ ವಿಷಯವನ್ನೇ ಮತ್ತೆ ಮತ್ತೆ ಚರ್ಚೆ ನಡೆಸಲು ಕೆಲ ಸದಸ್ಯರು ವಿರೋಧವ್ಯಕ್ತಪಡಿಸಿದರು. ಅದಾಗಿಯೂ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಸೋಮೇಶ್ವರ ನಾಯ್ಕ ಈ ವಿಷಯದ ಬಗ್ಗೆ ಚರ್ಚಿಸಲು ಪಟ್ಟು ಹಿಡಿದರು.
ಆಗ, ಪಟ್ಟಣ ಪಂಚಾಯತ ಕಡತದಲ್ಲಿ ಜಾತ್ರೆ ಲೆಕ್ಕಾಚಾರದ ಕಾಗದ ಪತ್ರಗಳು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಆಗ ಸದಸ್ಯರು ಪ ಪಂ ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. `ಕಳೆದ ಸಭೆಯಲ್ಲಿ 11 ಲಕ್ಷ ರೂ ಅವ್ಯವಹಾರ ಬೆಳಕಿಗೆ ಬಂದಿತ್ತು. ಇದೀಗ ಆ ಫೈಲ್ ಸಿಗುತ್ತಿಲ್ಲ. ಇನ್ನಷ್ಟು ಅವ್ಯವಹಾರ ನಡೆದ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವೆ ಎಂದು ಸತೀಶ ನಾಯ್ಕ ಹೇಳಿದರು.