
ಭಟ್ಕಳದ ರಂಗಿನಕಟ್ಟಾ ವಿನಾಯಕ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
News Details
ಭಟ್ಕಳದ ರಂಗಿನಕಟ್ಟಾ ವಿನಾಯಕ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಸೊಸೈಟಿಗೆ ನುಗ್ಗಿ 1.70 ಲಕ್ಷ ರೂ ದೋಚಿದ್ದ ಮಹಮದ್ ರಾಯಿಕ್ ಎಂಬಾತನನ್ನು ಬಂಧಿಸಿದ್ದಾರೆ. 2024ರ ಜೂನ್ 14ರಂದು ಭಟ್ಕಳದ ರಂಗಿನಕಟ್ಟಾ ವಿನಾಯಕ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಎಂದಿನoತೆ ನಡೆದಿತ್ತು. ಸಂಜೆ ಸಿಬ್ಬಂದಿ ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಸೊಸೈಟಿಯಲ್ಲಿ ಕಳ್ಳತನ ನಡೆದಿರುವುದು ಅರಿವಿಗೆ ಬಂದಿತ್ತು. ಸೊಸೈಟಿಯಲ್ಲಿದ್ದ 170968ರೂ ಕಣ್ಮರೆಯಾಗಿತ್ತು. ಈ ಬಗ್ಗೆ ಸೊಸೈಟಿಯವರು ಪೊಲೀಸ್ ದೂರು ನೀಡಿದ್ದರು. ಆದರೆ, ಕಳ್ಳ ಮಾತ್ರ ಈವರೆಗೂ ಸಿಕ್ಕಿರಲಿಲ್ಲ. ಅನೇಕ ತಿಂಗಳಿನಿAದ ಈ ಪ್ರಕರಣ ಬಾಕಿಯಿರುವ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ವಿಚಾರಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಪೊಲೀಸ್ ಉಪಾಧ್ಯಕ್ಷ ಮಹೇಶ ಎಂ ಕೆ ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಭಟ್ಕಳದ ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸ್ಐ ನವೀನ ನಾಯ್ಕ, ಶಾಂತಿನಾಥ ಪಾಸಾನೆ ನೇತ್ರತ್ವದಲ್ಲಿ ಕಳ್ಳತನ ಪ್ರಕರಣ ಬೇದಿಸಲು ತಂಡ ರಚಿಸಿದರು. ಪೊಲೀಸ್ ಸಿಬ್ಬಂದಿ ನಾರಾಯಣ ನಾಯ್ಕ, ದಿನೇಶ ನಾಯಕ, ಅರುಣ ಪಿಂಟೋ ಕಳ್ಳತನ ನಡೆದ ಸ್ಥಳ ಪರಿಶೀಲನೆ ಮಾಡಿದರು. ದೀಪಕ ನಾಯ್ಕ, ಮದರಸಾಬ್ ಚಿಕ್ಕೇರಿ, ಕಿರಣಕುಮಾರ ನಾಯ್ಕ ಸೇರಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡಿದರು. 2025ರ ಮಾರ್ಚ 18ರಂದು ನಾಗರಾಜ ಮೊಗೇರ್, ಕೃಷ್ಣ ಎನ್ ಜಿ, ಲೋಕೇಶ ಕತ್ತಿ ಕಾರ್ಯಾಚರಣೆ ನಡೆಸಿ ಮಹಮದ್ ರಾಯಿಕ್ ಎಂಬಾತನನ್ನು ವಶಕ್ಕೆಪಡೆದರು. ಭಟ್ಕಳ ಕಿದ್ವಾಯಿ ಮುಖ್ಯರಸ್ತೆಯ 2ನೇ ತಿರುವಿನಲ್ಲಿ ವಾಸವಾಗಿದ್ದ 24 ವರ್ಷದ ಮಹಮದ್ ರಾಯಿಕ್ ಆ ದಿನ ಸೊಸೈಟಿಯ ಲಾಕರ್ಸಹಿತ ಹಣ ಕದ್ದು ಪರಾರಿಯಾಗಿರುವುದನ್ನು ಪೊಲೀಸ್ ಸಿಬ್ಬಂದಿ ಜಗದೀಶ ನಾಯ್ಕ, ಮಹಾಂತೇಶ ಹೀರೆಮಠ್ ಕಂಡು ಹಿಡಿದರು. ಮಹಮದ್ ರಾಯಿಕ್ ಈ ಹಿಂದೆ 16ಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಪೊಲೀಸ್ ಸಿಬ್ಬಂದಿ ಕಾಶಿನಾಥ ಕೊಟಗೊಣಸಿ ಹಾಗೂ ಕಿರಣ ಪಾಟೀಲ ಪತ್ತೆ ಹಚ್ಚಿದರು. ಈ ಎಲ್ಲಾ ಪೊಲೀಸರು ಸೇರಿ ಕಳ್ಳ ಮಹಮದ್ ರಾಯಿಕ್ ಬಳಿಯಿದ್ದ 40 ಸಾವಿರ ರೂ ಹಣವನ್ನು ವಶಕ್ಕೆಪಡೆದರು. ಮಹಮದ್ ರಾಯಿಕ್ ಪ್ರಕರಣದ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.