
ಮೇ 5ರಿಂದ ಪರಿಶಿಷ್ಟ ಜಾತಿ ಮನೆಗಣತಿ ಪ್ರಾರಂಭ; ಒಳಮೀಸಲಾತಿಗೆ ವೈಜ್ಞಾನಿಕ ಅಧ್ಯಯನವಾಗಲಿದೆ – ರವೀಂದ್ರ ನಾಯ್ಕ
News Details
ಪರಿಶಿಷ್ಟ ಜಾತಿಯ ಮನೆ, ಮನೆ ಗಣತಿ ಮೇ ೫ ಸೋಮವಾರದಿಂದ ರಾಜ್ಯಾದಂತ ಪ್ರಾರಂಭವಾಗಲಿದೆ. 'ಪರಿಶಿಷ್ಟ ಜಾತಿಯ ಮೀಸಲಾತಿಯ ಮರು ಹಂಚಿಕೆಯ ಉದ್ದೇಶದಿಂದ ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿತ್ಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಗುರುತಿಸುವಿಯು ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಕಾಂತ್ರಿಕಾರಿಯ ಹೆಜ್ಜೆಯಾಗಲಿದೆ' ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಸಮೀಕ್ಷೆಯ ಜಾಗೃತೆ ಅಂಗವಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಕೈಪೀಡಿ ಅವಲೋಕಿಸಿದ ಅವರು ತಮ್ಮ ನಿಲುವು ಹೊರಹಾಕಿದರು. 'ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಿಸ್ಸಿನ ಮೇರೆಗೆ ರಾಜ್ಯ ಸರ್ಕಾರದ ಮಾರ್ಚ ೨೭ರ ಸಚಿವ ಸಂಪುಟದ ತೀರ್ಮಾನದಂತೆ ಕರ್ನಾಟಕದಲ್ಲಿನ 101 ಪರಿಶಿಷ್ಟ ಜಾತಿಯ ಸುಮಾರು 25 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ಜರುಗಲಿದೆ' ಎಂದು ಅವರು ಹೇಳಿದರು.
'ಸಮೀಕ್ಷೆಯ ಸಂದರ್ಭದಲ್ಲಿ ಕುಟುಂಬದ ಹಿನ್ನಲೆ, ವಿದ್ಯಾಭ್ಯಾಸ, ಕುಲಕಸುಬು, ವಾರ್ಷಿಕ ಆದಾಯ, ಮೀಸಲಾತಿಯಿಂದ ಈಗಾಗಲೇ ಪಡೆದುಕೊಂಡಿರುವ ಶೈಕ್ಷಣಿಕ, ಉದ್ಯೋಗ ಸೌಲಭ್ಯ, ರಾಜಕೀಯ, ಚರಾಸ್ತಿ, ಭೂಒಡೆತನ, ವಸತಿ ವ್ಯವಸ್ಥೆ, ಮುಂತಾದ 46 ಪ್ರಶ್ನೆ ಮತ್ತು ಉಪ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಗಣತಿದಾರರಿಂದ ಸಂಗ್ರಹಿಸಲಾಗುವುದು' ಎಂದು ಅವರು ಹೇಳಿದರು.
'ಪರಿಶಿಷ್ಟ ಜಾತಿಗೆ ಒಳಪಟ್ಟು ಮೀಸಲಾತಿ ಸೌಲಭ್ಯದ ಪ್ರಾತಿನಿತ್ಯದಿಂದ ವಂಚಿತವಾಗಿರುವ ಉಪಜಾತಿಗಳಿಗೆ ನ್ಯಾಯಮೂರ್ತಿ ಡಾ.ಎಚ್.ಎನ್ ನಾಗಮೋಹನದಾಸ ಅವರ ಏಕ ಸದಸ್ಯ ವಿಚಾರಣಾ ಆಯೋಗದಿಂದ ಸಾಮಾಜಿಕ ನ್ಯಾಯ ದೊರಕುವ ವಿಶ್ವಾಸವಿದೆ' ಎಂದರು.