
SSLC ಪರೀಕ್ಷೆಯ 6 ವಿಷಯಗಳಲ್ಲಿ ಫೇಲ್ ಆದ ಪುತ್ರನಿಗೆ ಕೇಕ್ ತಿನ್ನಿಸಿ ಧೈರ್ಯ ತುಂಬಿದ ಪೋಷಕರು
News Details
ಯಾವುದೇ ಪರೀಕ್ಷೆ ಅನುತ್ತೀರ್ಣರಾದವರಿಗೆ ಮೊದಲು ಧೈರ್ಯ ತುಂಬ ಬೇಕಾಗಿರುವುದು ಪ್ರತಿ ತಂದೆ-ತಾಯಿಯ ಕರ್ತವ್ಯ. ಮಕ್ಕಳ ಯಶಸ್ಸಿನ ಜತೆ ಮಾತ್ರವಲ್ಲ. ಸೋಲಿನ ಜತೆಯಲ್ಲೂ ಸಹ ಧೈರ್ಯವಾಗಿಯೇ ನಿಲ್ಲಬೇಕಾಗಿರುವುದು ಮಾದರಿ ಪೋಷಕರ ಒಂದು ಕರ್ತವ್ಯ. ಈ ನಿಟ್ಟಿನಲ್ಲಿ ಆದರ್ಶವಾಗಿ ನಿಂತಿದ್ದಾರೆ 6 ವಿಷಯಗಳಲ್ಲಿ ಎಸ್ಎಸ್ಎಲ್ಸಿ ಫೇಲಾದ ಬಾಗಲಕೋಟೆ ವಿದ್ಯಾರ್ಥಿ ಅಭಿಷೇಕ್ ಪೋಷಕರು.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 1 ಫಲಿತಾಂಶ ಬಿಡುಗಡೆ ಆಗಿದೆ. ರಾಜ್ಯಕ್ಕೆ ಈ ವರ್ಷ 22 ವಿದ್ಯಾರ್ಥಿಗಳು 625 ಪೂರ್ಣ ಅಂಕಗಳನ್ನು ಗಳಿಸಿ ಟಾಪರ್ ಆಗಿದ್ದಾರೆ. ಈ ವಿದ್ಯಾರ್ಥಿಗಳ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಇನ್ನು ಇದಕ್ಕಿಂತ ಒಂದೆರಡು ಕಡಿಮೆ ಅಂಕಪಡೆದವರ ವಿದ್ಯಾರ್ಥಿಗಳ ಮನೆಯಲ್ಲಿಯೂ ಪರವಾಗಿಲ್ಲ ಚಿಂತೆಬೇಡ ಎಂದು ಮಕ್ಕಳಿಗೆ ಬೆನ್ನುತಟ್ಟಿದ್ದಾರೆ. ಇತ್ತೀಚೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಶಿವಮೊಗ್ಗ ಮೂಲದ ದೀಕ್ಷಾ 1 ಅಂಕ ಕಡಿಮೆ ಬಂದಿದ್ದಕ್ಕೆ ಮರುಮೌಲ್ಯಮಾಪನಕ್ಕೆ ಹಾಕಿ 600 ಕ್ಕೆ 600 ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದರು. ಹೀಗೆ ಕೆಲವರು ಒಂದು ಅಂಕ ಕಡಿಮೆ ಬಂದರೂ ಅದನ್ನು ಬಿಡಲಾರೆ ಎನ್ನುತ್ತಾರೆ. ಹಾಗೆಯೇ ಮೊದಲು ಕಡಿಮೆ ಬಂದಿದ್ದಕ್ಕೆ ಅದೆಷ್ಟು ದುಃಖಿಸಿರುತ್ತಾರೋ.
ಇನ್ನು ಪರೀಕ್ಷೆಗಳಲ್ಲಿ ಒಂದೆರಡು ಅಂಕ ಕಡಿಮೆ ಬಂದರೂ, ಒಂದು ಅಥವಾ ಎರಡು ವಿಷಯಗಳಲ್ಲಿ ಫೇಲ್ ಆದರೂ ಸಹ ಮನನೊಂದುಕೊಳ್ಳುವವರು, ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು ಇದ್ದಾರೆ. ಅದಕ್ಕೆಲ್ಲ ಕಾರಣ ಅವರ ಸುತ್ತ ಸುತ್ತಿಕೊಂಡ ಮರ್ಯಾದೆ ಎಂಬ ಭಾವನೆಗಳು, ಧೈರ್ಯ ಕಳೆದುಕೊಂಡ ಸನ್ನಿವೇಶ, ನನ್ನವರು ಬೈಯುತ್ತಾರೆ ಎಂಬ ಭಯ, ಹೀಗೆ ಹಲವು ಕಾರಣಗಳನ್ನು ಹೇಳುತ್ತಾ ಹೋಗಬಹುದು. ಆದ್ರೆ ನೆನಪಿರಲಿ ದೇಶದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಫೇಲ್ ಆಗಿಯೂ ಸಹ ಅದೆಷ್ಟೋ ಪ್ರಜೆಗಳು ಐಎಎಸ್, ಐಪಿಎಸ್ ನಾಗರೀಕ ಸೇವೆಗಳನ್ನು ಪಡೆದಿದ್ದಾರೆ. ಹೀಗೆ ಫೇಲಾದವರು ಒಮ್ಮೆ ಇಂತಹವರನ್ನು ಆದರ್ಶ ಎಂದುಕೊಂಡು ಮತ್ತೆ ಓದಿದ್ರೆ, ಅವರ ಸಾಧನೆಯ ಹಾದಿ ಸುಗಮವಾಗುವಲ್ಲಿ ಸಂಶಯವೇ ಬೇಡ.
ಅಂದಹಾಗೆ ನಿನ್ನೆಯ ಎಸ್ಎಸ್ಎಲ್ಸಿ ಫಲಿತಾಂಶದ ನಂತರ, ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಧೈರ್ಯ ತುಂಬುವ, ಉತ್ಸಾಹ ಹೆಚ್ಚಿಸುವ ಪೊಷಕರ ಸಾಲಿನಲ್ಲಿ ಉನ್ನತ ಮಟ್ಟದಲ್ಲಿ ಮಾದರಿ ಆಗಿದ್ದಾರೆ ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬರ ತಂದೆ-ತಾಯಿ.