
ಕಾಶಿಯಾತ್ರೆ ವೇಳೆ ಮನೆ ಕಳ್ಳತನ: ಯಲ್ಲಾಪುರದ ಭಟ್ಟರಿಗೆ ₹2.30 ಲಕ್ಷ ನಷ್ಟ
News Details
ಯಲ್ಲಾಪುರದ ಗೋಪಾಲಕೃಷ್ಣ ಭಟ್ಟರು ಕಾಶಿಯಾತ್ರೆಗೆ ಹೋಗಿ 2.30 ಲಕ್ಷ ರೂ ನಷ್ಟ ಮಾಡಿಕೊಂಡಿದ್ದಾರೆ. ಅವರು ಯಾತ್ರೆಗೆ ಹೋದ ಅವಧಿಯಲ್ಲಿ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಅಪಹರಿಸಿದ್ದಾರೆ!
ಯಲ್ಲಾಪುರ ತಾಲೂಕಿನ ನಂದೂಳ್ಳಿಯ ಬೆಳಖಂಡ ಕುಂಟೆಮನೆಯಲ್ಲಿ ಗೋಪಾಲಕೃಷ್ಣ ಭಟ್ಟರು (50) ವಾಸವಾಗಿದ್ದರು. ಕೃಷಿ ಜೊತೆ ಪೌರೋಹಿತ್ಯವನ್ನು ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಬಂದ ಆದಾಯದಲ್ಲಿ ಕೊಂಚ ಉಳಿಸಿ ಚಿನ್ನಾಭರಣವನ್ನು ಅವರು ಮಾಡಿಸಿದ್ದರು. ಆ ಚಿನ್ನಾಭರಣವನ್ನು ಮನೆಯ ಕಪಾಟಿನಲ್ಲಿ ಜೋಪಾನವಾಗಿರಿಸಿಕೊಂಡಿದ್ದರು.
ಗೋಪಾಲಕೃಷ್ಣ ಭಟ್ಟರು ಈಚೆಗೆ ಕಾಶಿ ಯಾತ್ರೆಗೆ ಹೋಗಿ ಊರಿಗೆ ಮರಳಿದ್ದರು. ಏಪ್ರಿಲ್ 26ರಂದು ಅವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆ ಬೀಗ ಒಡೆದರು. ಬೆಡ್ರೂಮಿನಲ್ಲಿ ಭದ್ರವಾಗಿದ್ದ ಗೋದ್ರೇಜ್ ಕಪಾಟನ್ನು ಕಳ್ಳರು ಮುರಿದರು. ಅದರೊಳಗಿನ ಲಾಕರಿನಲ್ಲಿರಿಸಿದ್ದ 53 ಗ್ರಾಂ ಬಂಗಾರವನ್ನು ಕಳ್ಳರು ದೋಚಿ ಪರಾರಿಯಾದರು.
ಮನೆಯಲ್ಲಿದ್ದ 10 ಸಾವಿರ ರೂ ಹಣವನ್ನು ಕಳ್ಳರು ಕದ್ದಿದ್ದರು. ಕಾಶಿಯಾತ್ರೆ ಮುಗಿಸಿ ಬಂದ ಗೋಪಾಲಕೃಷ್ಣ ಭಟ್ಟರಿಗೆ ಈ ಕಳ್ಳತನ ನೋಡಿ ಆಘಾತವಾಯಿತು. ಚಿಕ್ಕಪ್ಪನ ಜೊತೆ ಕಳ್ಳತನದ ವಿಷಯವಾಗಿ ಚರ್ಚಿಸಿದರು. ಅವರ ಸಲಹೆಪಡೆದು ಗೋಪಾಲಕೃಷ್ಣ ಭಟ್ಟರು ಪೊಲೀಸ್ ಠಾಣೆಗೆ ಬಂದರು. ಕಳ್ಳರ ಕೈ ಚಳಕದ ಬಗ್ಗೆ ದೂರು ನೀಡಿದರು. ಆ ಕಳ್ಳರನ್ನು ಪತ್ತೆ ಮಾಡಿ, ತಮ್ಮ ಹಣ-ಆಭರಣ ಮರಳಿಸಿ ಎಂದು ಪ್ರಕರಣ ದಾಖಲಿಸಿದರು.
ಪೊಲೀಸರು ಇದೀಗ ಕಳ್ಳರ ಹುಡುಕಾಟ ನಡೆಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.