
ಯೋಧರ ಗೆಲುವಿಗಾಗಿ ಯಲ್ಲಾಪುರದಲ್ಲಿ ಹೋಮ-ಹವನ, ಪ್ರಾರ್ಥನೆ
News Details
ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿರುವ ಭಾರತೀಯ ಯೋಧರಿಗೆ ಗೆಲುವು ಸಿಗಲಿ' ಎಂದು ಎಲ್ಲಡೆ ಹೋಮ-ಹವನ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಹ ಬಿಜೆಪಿಗರು ಯೋಧರ ಯಶಸ್ಸಿಗಾಗಿ ಗ್ರಾಮದೇವಿ ಸನ್ನಿಧಿಯಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರು ಪಾಕಿಸ್ತಾನದ 100ಕ್ಕೂ ಅಧಿಕ ಭಯೋತ್ಪಾದಕರನ್ನು ಹೊಡದುರುಳಿಸಿದ್ದಾರೆ. `ಈ ಧೈರ್ಯ-ಸಾಹಸ ಮೆರೆದ ಯೋಧರಿಗೆ ಇನ್ನಷ್ಟು ಶಕ್ತಿ ಸಿಗಲಿ' ಎಂದು ಬಿಜೆಪಿ ಪದಾಧಿಕಾರಿಗಳು ಶಕ್ತಿದೇವತೆಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.
ಶುಕ್ರವಾರ ಬೆಳಗ್ಗೆ ಗ್ರಾಮದೇವಿ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ಪ್ರಮುಖರು ಯೋಧರ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾರ್ಥಿಸಿದರು. `ಭಾರತೀಯ ಯೋಧರು ವಿಜಯಶಾಲಿಗಳಾಗಿ ಬರಲಿ' ಎಂದು ಅರ್ಚನೆ ಮಾಡಿಸಿದರು. ಗ್ರಾಮದೇವಿಯರಿಗೆ ಉಡಿ ತುಂಬಿಸಿ ದೇಶದ ಒಳತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಪದಾಧಿಕಾರಿ ಜಿ ಎನ್ ಗಾಂವ್ಕರ್ ಯೋಧರ ಸೇವೆ ಸ್ಮರಿಸಿದರು. ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ ತಳೇಕರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ, ಒಬಿಸಿ ಪ್ರಧಾನ ಕಾರ್ಯದರ್ಶಿ ರವಿ ದೇವಡಿಗ, ಬಿಜೆಪಿ ಪದಾಧಿಕಾರಿಗಳಾದ ಅನಂತ ಗಾಂವ್ಕರ, ಮಂಜುನಾಥ್ ಹರಿಜನ, ಸುಧೀರ ಆಚಾರಿ, ಉಲ್ಲಾಸ ಮರಾಠಿ, ತುಳಸಿದಾಸ ನಾಯ್ಕ, ನರಸಿಂಹ ಭಟ್ಟ, ಅಮೃತ ಬದ್ದಿ ಇತರರು ಇದ್ದರು.