
ಅವರ್ಸಾ ಗ್ರಾಮ ಪಂಚಾಯತಿಯ ದುಡಿಯದ ಬಾಡಿಗೆ ಧೋರಣೆ: ಸರ್ಕಾರಿ ಕಟ್ಟಡಗಳನ್ನು ಬಾಡಿಗೆಗೆ ನೀಡಿ, ಬಾಡಿಗೆ ಹಣ ಸಂಗ್ರಹವಿಲ್ಲ!
News Details
ಸರ್ಕಾರಿ ಹಣ ವೆಚ್ಚ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನು ಅಂಕೋಲಾದ ಅವರ್ಸಾ ಗ್ರಾಮ ಪಂಚಾಯತವೂ ಕೆಲವರಿಗೆ ಬಾಡಿಗೆಗೆ ನೀಡಿದೆ. ಆದರೆ, ಬಾಡಿಗೆದಾರರಿಂದ ಬಾಡಿಗೆ ಹಣ ಸ್ವೀಕರಿಸಲು ಗ್ರಾಮ ಪಂಚಾಯತಗೆ ಪುರಸೋತಾಗಿಲ್ಲ!
ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಮೊದಲೇ ರಾಜ್ಯ ಸರ್ಕಾರ ದಿಕ್ಕೆಟ್ಟಿದೆ. ಯಾವುದನ್ನೂ ಉಚಿತವಾಗಿ ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಅದಾಗಿಯೂ ಅವರ್ಸಾ ಗ್ರಾಮ ಪಂಚಾಯತ ಅಧಿಕಾರಿಗಳು ಲಕ್ಷಾಂತರ ರೂ ಬಾಡಿಗೆಯನ್ನು ವಸೂಲಿ ಮಾಡದೇ ಹಾಗೇ ಬಿಟ್ಟಿದ್ದಾರೆ. ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳ ಅಸಡ್ಡೆಯಿಂದ 9 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಗ್ರಾಮ ಪಂಚಾಯತಗೆ ಬರುವುದು ಬಾಕಿಯಿದೆ. ಗ್ರಾ ಪಂ ಬಾಡಿಗೆ ವಸೂಲಿ ಮಾಡದ ಕಾರಣ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕೊರತೆ ಎದುರಾಗಿದ್ದು, ಈ ಬಗ್ಗೆ ಅರಿವಿದ್ದರೂ ಸರ್ಕಾರಿ ಆಸ್ತಿಯ ಬಾಡಿಗೆ ವಸೂಲಿ ಮಾಡಲು ಸಹ ಗ್ರಾ ಪಂ ಅಧಿಕಾರಿಗಳಿಗೆ ಸಮಯ ಸಾಲುತ್ತಿಲ್ಲ.
ಲಭ್ಯವಿರುವ ದಾಖಲಾತಿಗಳ ಪ್ರಕಾರ ಅವರ್ಸಾ ಗ್ರಾ ಪಂ ಅಧೀನದಲ್ಲಿ 23 ವ್ಯಾಪಾರ ಮಳಿಗೆಗಳಿದೆ. ಅದೆಲ್ಲವನ್ನು ಗ್ರಾ ಪಂ ಬಾಡಿಗೆಗೆ ಬಿಟ್ಟಿದೆ. ಟೆಂಡರ್ ಮೂಲಕ ಮಳಿಗೆಗಳನ್ನು ಹರಾಜು ಹಾಕಲಾಗಿದ್ದು, ಟೆಂಡರ್ ಪಡೆದವರಲ್ಲಿ ಏಳು ವ್ಯಾಪಾರಿಗಳು ಮಾತ್ರ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿದ್ದಾರೆ. ಉಳಿದ 16 ಮಳಿಗೆ ಪಡೆದವರು ಬಾಡಿಗೆ ಹಣವನ್ನು ನೀಡಿಲ್ಲ. ಗ್ರಾಮ ಪಂಚಾಯತಗೆ ಬರಬೇಕಾದ ಬಾಕಿ ಪಾವತಿಸುವಂತೆ ಗ್ರಾ ಪಂ ಅಧಿಕಾರಿಗಳು ಸೂಚನೆ ನೀಡಿಲ್ಲ.
ಇನ್ನೂ `ಗ್ರಾ ಪಂ ಅಭಿವೃದ್ಧಿ ಅಧಿಕಾರಿಯೇ ತಮ್ಮ ಆಪ್ತರಿಗೆ ಮಳಿಗೆ ಹಂಚಿಕೆ ಮಾಡಿದ್ದಾರೆ' ಎಂಬ ಆರೋಪವಿದೆ. `ಸರ್ಕಾರಿ ಆಸ್ತಿಯನ್ನು ಕೆಲವರು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ' ಎಂಬ ಬಗ್ಗೆಯೂ ಊರಿನವರು ದೂರಿದ್ದಾರೆ. `ಗ್ರಾ ಪಂ ಸದಸ್ಯರ ಕುಮ್ಮಕ್ಕಿನಿಂದ ಅಪರಾತಪರ ನಡೆದಿದೆ' ಎಂಬ ವದಂತಿಯೂ ಕೇಳಿ ಬಂದಿದೆ. ಆದರೆ, ಈ ಮಾತುಗಳಿಗೆ ಯಾವುದೇ ಪುರಾವೆ ಸಿಕ್ಕಿಲ್ಲ.
ಫೋನ್ ಮಾಡಿದರೆ ಪಿಡಿಓ ನಾಪತ್ತೆ!
ದಾಖಲೆಗಳ ಪ್ರಕಾರ ಸರ್ಕಾರಿ ಆಸ್ತಿ ದುರ್ಬಳಕೆ ನಡೆದಿರುವುದು ಸ್ಪಷ್ಠವಾಗಿದೆ. ಸರ್ಕಾರಕ್ಕೆ ಪಾವತಿಯಾಗಬೇಕಿದ್ದ ಹಣವನ್ನು ವಸೂಲಿ ಮಾಡದೇ ಅಧಿಕಾರಿಗಳು ಲೋಪವೆಸಗಿರುವುದು ಕಾಣಿಸುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯತ ವೆಬ್ಸೈಟಿನಲ್ಲಿರುವ ದಾಖಲೆ ಅನ್ವಯ ಅವರ್ಸಾ ಪಿಡಿಓ ಸೀತಾ ಮೇತ್ರಿ ಅವರಿಗೆ ಫೋನ್ ಮಾಡಿದಾಗ ಈ ಬಗ್ಗೆ ಉತ್ತರಿಸಲು ತಡವರಿಸಿದರು. `ಮಳಿಗೆ ಪಡೆದವರ ಡಿಪೋಜಿಟ್ ಇದೆ. ಅದೆಲ್ಲವನ್ನು ಪರಿಶೀಲಿಸಬೇಕು' ಎಂದರು. ಇನ್ನಷ್ಟು ಪ್ರಶ್ನೆಗಳಿಗೆ `10 ನಿಮಿಷದಲ್ಲಿ ಮತ್ತೆ ಫೋನ್ ಮಾಡುವೆ' ಎಂದವರು ಮತ್ತೆ ಫೋನ್ ಮಾಡಲಿಲ್ಲ.