
ಉತ್ತರ ಕನ್ನಡದಲ್ಲಿ 439 ಗುಡ್ಡ ಕುಸಿತ ಪ್ರಭಾವಿತ ಪ್ರದೇಶಗಳು ಗುರುತು: ಮುನ್ನಚ್ಚರಿಕೆ ಕ್ರಮಗಳಿಗೆ ಜಿಲ್ಲಾಡಳಿತದಿಂದ ಸೂಚನೆ
News Details
ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಲು ಜಿಲ್ಲಾಡಳಿತ ಅಧೀನ ಅಧಿಕಾರಿಗಳಿಗೆ ಸೂಚಿಸಿದೆ.
`ಮಳೆ ಅವಧಿಯಲ್ಲಿ ಅವಘಡ ನಡೆಯದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಜರುಗಿಸಬೇಕು' ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಅವರು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು `ಎಲ್ಲಾ ನಗರಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಚರಂಡಿ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಚರಂಡಿ ಹೂಳಿನ ಸಮಸ್ಯೆಯಿಂದ ನೆರೆ ಪರಿಸ್ಥಿತಿ ಉಂಟಾಗದoತೆ ಮುನ್ನೆಚ್ಚರಿಕೆವಹಿಸಬೇಕು' ಎಂದು ಸೂಚಿಸಿದರು.
`ಗುಡ್ಡ ಕುಸಿತ ಕುರಿತಂತೆ ಮುನ್ನೆಚ್ಚರಿಕೆ ನೀಡಲು ಸ್ಪಾರ್ಸ್ ಗಳನ್ನು ನೇಮಿಸಲಾಗಿದ್ದು, ಇವರಿಗೆ ಈಗಾಗಲೇ ಜಿ.ಎಸ್.ಐ ಅಧಿಕಾರಿಗಳು ತರಬೇತಿಯನ್ನು ನೀಡಿದ್ದು, ಅವರಿಗೆ ಮೇ ಕೊನೆಯ ವಾರದಲ್ಲಿ ಮತ್ತೊಂದು ಸುತ್ತಿನ ತರಬೇತಿ ನೀಡಲಾಗುವುದು ಎಂದರು. `ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ, ಸಂಪರ್ಕ ಸಂಖ್ಯೆಗಳು, ಯಂತ್ರೋಪಕರಣಗಳು, ಸುರಕ್ಷಿತ ಸ್ಥಳಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸಿದ್ದವಾಗಿಟ್ಟುಕೊಂಡು ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ವಿಪತ್ತು ಎದುರಾದಲ್ಲಿ ಅದನ್ನು ಎದುರಿಸಲು ಸಂಪೂರ್ಣ ಸನ್ನಧ್ದರಾಗಿರಬೇಕು' ಎಂದರು.
`ರಾಷ್ಟಿಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸುವ ಕುರಿತಂತೆ ಅವರಿಗೆ ಈಗಾಗಲೇ ಸಾಕಷ್ಟು ಕಾಲಾವಕಾಶವನ್ನು ನೀಡಿದ್ದು, ಇವುಗಳನ್ನು ಮಳೆಗಾಲ ಆರಂಭವಾಗುವುದರ ಒಳಗೆ ತೆರವುಗೊಳಿಸಬೇಕು' ಎಂದು ವಿವಿಧ ತಹಶೀಲ್ದಾರರಿಗೆ ಸೂಚಿಸಿದರು. `ಶಾಲೆ, ಅಂಗನವಾಡಿ ಮತ್ತು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಮಾಲ್ಕಿ ಜಮೀನಿನಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಮೂಲಕ ಆ ಸ್ಥಳಗಳ ಮಾಲೀಕರಿಗೆ ಅನುಮತಿ ನೀಡಬೇಕು. ಸಿಡಿಲಿನಿಂದ ಆಕಸ್ಮಿಕ ಸಾವುಗಳಾಗುವುದನ್ನು ತಪ್ಪಿಸಲು ಜನರಲ್ಲಿ ಅರಿವು ಮೂಡಿಸಬೇಕು' ಎಂದರು.
`ಮಳೆಗಾಲದಲ್ಲಿ ನೇವಲ್ ಬೇಸ್ ವ್ಯಾಪ್ತಿಯ ಗ್ರಾಮಗಳಲ್ಲಿ ನೆರೆ ಉಂಟಾಗದoತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಇಲ್ಲಿನ ಚರಂಡಿ ಗಳಲ್ಲಿ ಡ್ರಜ್ಜಿಂಗ್ ಕಾರ್ಯ ಕೈಗೊಂಡು ಮಳೆ ನೀರು ಹರಿದು ಹೋಗುವಂತೆ ನೋಡಿಕೊಳ್ಳಿ' ಎಂದು ಕಾರವಾರ ತಹಸೀಲ್ದಾರ್ಗೆ ಸೂಚಿಸಿದರು. ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿ ಕನಿಷ್ಕ, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಇತರರಿದ್ದರು.